19/08/2026
ಪುರುಷೋತ್ತಮ ಬಿಳಿಮಲೆ ಅವರ ಆತ್ಮಕಥನ 'ಕಾಗೆ ಮುಟ್ಟಿದ ನೀರು' ಕುರಿತು ರಾಜಾರಾಂ ತಲ್ಲೂರು ಅವರ ಟಿಪ್ಪಣಿ...
ಹೂಜಿ ಮತ್ತು ಕಲ್ಲು…!...................
'ಕಾಗೆ' ಮತ್ತು 'ನೀರು' ಬಂದ ಮೇಲೆ ಕಥೆ ಪೂರ್ಣವಾಗಲು ಹೂಜಿ ಮತ್ತು ಕಲ್ಲು ಬರಬೇಕಲ್ಲವೆ?
ಬಿಳಿಮಲೆಯವರ 'ಕಾಗೆ ಮುಟ್ಟಿದ ನೀರು' ಅವರ ಮಾತಿನಷ್ಟೇ ಸರಾಗವಾಗಿ, ಆಕರ್ಷಕವಾಗಿ ಓದಿಸಿಕೊಂಡು ಹೋಗುತ್ತದೆ.
1986-87ರ ಹೊತ್ತಿಗೆ ಮಂಗಳೂರು ವಿವಿಯಲ್ಲಿ ಎಳೆಯ – ಉತ್ಸಾಹಿ ಉಪನ್ಯಾಸಕರಾಗಿದ್ದ ಬಿಳಿಮಲೆಯವರ ಮಾತನ್ನು ನಾನು ಮೊದಲು ಕೇಳಿದ್ದು ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿ ಕನ್ನಡ ಸಂಘಕ್ಕೆ ಅವರು ಉಪನ್ಯಾಸಕ್ಕಾಗಿ ಬಂದಿದ್ದಾಗ. ಅವರಿಗೆ ಉಪನ್ಯಾಸದ ಬಳಿಕ ಪ್ರಶ್ನೆಗಳನ್ನು ಕೇಳಿ 'ಕಿರಿಕಿರಿ' ಮಾಡಿದ ತಂಡದ ಭಾಗವಾಗಿ ನಾನೂ ಇದ್ದೆ!
ಅದಾದ ಬಳಿಕ ನನ್ನ ದಿಕ್ಕು ಬದಲಾಯ್ತು. 1989ರ ಹೊತ್ತಿಗೆ ವಿವಿಯಲ್ಲಿ ಅವರ ವಿದ್ಯಾರ್ಥಿ ಆಗಿದ್ದ ಕೃಷ್ಣಮೂರ್ತಿ ಚಿತ್ರಾಪುರ (ಈಗ ಗೋವಿಂದ ಕಾಲೇಜಿನ ಪ್ರಾಂಶುಪಾಲರು) ಅವರ ಮೂಲಕ ಬಿಳಿಮಲೆ ಪರಿಚಿತರಾದರು. ಆಗ ನಾವು ಸುರತ್ಕಲ್ ಪರಿಸರದಲ್ಲಿ ಪಂಚಮುಖಿ ವೇದಿಕೆ ಹೆಸರಲ್ಲಿ ನಡೆಸುತ್ತಿದ್ದ ಸ್ಟಡಿ ಸರ್ಕಲ್ ಗೆ ಬಿಳಿಮಲೆಯವರು ಒಂದೆರಡು ಬಾರಿ ಬಂದಿದ್ದರು. ಆ ಕಾಲಕ್ಕೆ ಅವರೊಂದಿಗೆ ಸತತ ಸಂಪರ್ಕಗಳಿದ್ದವು.
ಮತ್ತೆ ಅವರು ನನ್ನ ಮಟ್ಟಿಗೆ ಸುದ್ದಿಗೆ ಬಂದದ್ದು, ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನಲ್ಲಿ ಅವರ ಕಿರಿಯ ಸಹೋದ್ಯೋಗಿ ಆಗಿದ್ದ ನನ್ನ ಸ್ನೇಹಿತ, ಉರ್ದು ಉಪನ್ಯಾಸಕ ಅಹ್ತೇಶಾಮ್ ಖಾನ್ ಅವರ ಮೂಲಕ. ಆ ಬಳಿಕ ಭೇಟಿಯಾದದ್ದು, ಮೂರು ವರ್ಷಗಳ ಹಿಂದೆ ಅವರು ಪ್ರಶಸ್ತಿ ಸ್ವೀಕಾರಕ್ಕೆಂದು ಉಡುಪಿಗೆ ಬಂದಿಳಿದುಕೊಂಡಿದ್ದಾಗ.
30 ವರ್ಷಗಳ ದೀರ್ಘಾವಧಿಯ ಬಳಿಕವೂ ಈ ಸರಾಗ-ಆಕರ್ಷಕ ಮಾತು ಅದೇ ಮೊನಚು ಹೊಂದಿತ್ತು. ಇಂದು 'ಕಾಗೆ ಮುಟ್ಟಿದ ನೀರು', ಆ ಭೇಟಿಯ ಮುಂದುವರಿಕೆಯೇನೋ ಎಂಬಷ್ಟು ಆಪ್ತವಾಗಿ ಓದಿಸಿಕೊಂಡು ಹೋಯಿತು. ಅದಕ್ಕೆ ಈ ಪುಸ್ತಕದಲ್ಲಿ ಬರುವ ಹಲವು ಪಾತ್ರಗಳು ನನಗೂ ದೈನಂದಿನ ಬದುಕಿನಲ್ಲಿ ಆಗಾಗ ಎದುರಾದ ಪಾತ್ರಗಳೇ ಎಂಬುದೂ ಕಾರಣ ಆಗಿರಬಹುದು.
ಈ ಕಥೆಯನ್ನೆಲ್ಲ ನಾನು ಯಾಕೆ ಹೇಳುತ್ತಿದ್ದೇನೆಂದರೆ, ಒಬ್ಬರು ಉಪನ್ಯಾಸಕರಾಗಿ ಅವರ ವೃತ್ತಿಯನ್ನು ಹೇಗೆ ನಿಭಾಯಿಸಿದರೆಂಬುದರ ವಿವರಣೆ ಈ ಆತ್ಮಚರಿತ್ರೆಯಲ್ಲಿ ನನಗೆ ಮಹತ್ವದ್ದು. ಕನ್ನಡದ ಹೆಚ್ಚಿನೆಲ್ಲ ಮಹತ್ವದ ಬರಹಗಾರರೂ ಉಪನ್ಯಾಸಕರೇ ಆದರೂ, ಅವರು ಬರಹಗಾರರಾಗಿ ನೆನಪುಳಿಯುತ್ತಾರೆಯೇ ಹೊರತು ಅವರ 'ವೃತ್ತಿಪರತೆ'ಯ ಕಾರಣಕ್ಕಲ್ಲ. (ಗಮನಿಸಿ: ಇದನ್ನು ನಾನು ನನ್ನ ಕಣ್ಣಳತೆಯ ವ್ಯಾಪ್ತಿಯೊಳಗೆ ಸೀಮಿತಗೊಳಿಸಿ ಹೇಳುತ್ತಿದ್ದೇನೆ.)
ಅವರು ಆತ್ಮಕಥೆಯ ಪೂರ್ವಾರ್ಧದಲ್ಲಿ ಹೆಸರಿಸುವ ಅವರ ಗುರು ಪ್ರೊ|ಅಮೃತ ಸೋಮೇಶ್ವರರು, ಅಥವಾ ಅಮೃತರ ಓರಗೆಯಲ್ಲಿ ಸುರತ್ಕಲ್ ನಲ್ಲಿದ್ದ ಡಾ|ಸೀ.ಹೊಸಬೆಟ್ಟು, ಪ್ರೊ|ಶೇಖರ ಇಡ್ಯ, ಮೂಲ್ಕಿಯ ಪ್ರೊ|ಡಿ.ರಘುನಾಥ ರಾವ್… ಹೀಗೆ ಒಂದಿಡೀ ಹಳೆಯ ತಲೆಮಾರಿನ ಭಾಷಾ ಉಪನ್ಯಾಸಕರು ಅವರ ಬದ್ಧತೆ, ವೃತ್ತಿಯ ಕುರಿತು ಪ್ರೀತಿಗಳ ಕಾರಣದಿಂದಾಗಿ ಸಾಹಿತ್ಯ-ಸಮಕಾಲೀನ ಚಿಂತನೆಗಳಲ್ಲಿ ತೊಡಗಬಲ್ಲ ಶಿಷ್ಯವೃಂದವನ್ನು ಜಿಲ್ಲೆಯಾದ್ಯಂತ ಬೆಳೆಸಿದ್ದರು. ಅವರ ನೆಟ್ವರ್ಕಿಂಗ್ ಕೂಡ ಕುತೂಹಲಕರವಾಗಿತ್ತು. ಈ ತಲೆಮಾರು ಕೇವಲ ತಮ್ಮ ವಿದ್ವತ್ತಿಗಿರುವ ಅವಕಾಶಗಳನ್ನು ಅರಸಿ ಹೊರಟಿದ್ದರೆ, ಬೆಳೆಯುವ ದೊಡ್ಡದೊಡ್ಡ ಅವಕಾಶಗಳು ಅವರೆದುರು ಇರುತ್ತಿದ್ದವೇನೋ. ಅವರು ಹಾಗೆ ಮಾಡದೆ ತಮ್ಮ ಶಿಷ್ಯರ ಬೆಳವಣಿಗೆಯಲ್ಲೇ ತೃಪ್ತಿ ಕಂಡರು. ಅವರ ಮುಂದಿನ ಪೀಳಿಗೆಯವರು, ಚಿಂತಿಸಬಲ್ಲ ಶಿಷ್ಯವೃಂದವನ್ನೂ ಬೆಳೆಸಿಕೊಂಡರು; ಜೊತೆಗೇ ವೈಯಕ್ತಿಕವಾಗಿ ಬೆಳೆದುನಿಲ್ಲುವ ಅವಕಾಶಗಳತ್ತಲೂ ಗಮನ ಹರಿಸಿದರು. ಆ ಪೀಳಿಗೆಯ ಪ್ರಾತಿನಿಧಿಕ ರೂಪ ಪುರುಷೋತ್ತಮ ಬಿಳಿಮಲೆಯವರು. ಆ ಕಾರಣಕ್ಕಾಗಿಯೇ ಈವತ್ತು ಬಿಳಿಮಲೆ ಅವರಿಗೆ ಕರ್ನಾಟಕದಾದ್ಯಂತ ಅಥವಾ ಅವರೇ ಹೇಳಿಕೊಂಡಂತೆ ದೇಶ-ವಿದೇಶಗಳಲ್ಲೂ ಶಿಷ್ಯಬಳಗ ಸಿಗುವುದು ಸಾಧ್ಯವಾಯಿತು.
ನನ್ನ ಚಿಂತೆ ಇರುವುದು ಈಗಿನ ಪೀಳಿಗೆಯ ಉಪನ್ಯಾಸಕರ ಕುರಿತು. ಈ ಪೀಳಿಗೆ ಈಗ ಕೇವಲ ತಮ್ಮ ಅವಕಾಶ-ಬೆಳವಣಿಗೆಗಳತ್ತ ಸ್ವಾರ್ಥಮುಖ ಮಾಡಿಕೊಂಡಿದ್ದು, ವಿದ್ಯಾರ್ಥಿಗಳ ಬಗ್ಗೆಯಾಗಲೀ ತಮ್ಮ ಶಿಕ್ಷಕ ವೃತ್ತಿಯ ಬಗ್ಗೆಯಾಗಲೀ ಬದ್ಧತೆ-ಪ್ರೀತಿ ಹೊಂದಿರುವುದು ಕಾಣಿಸುತ್ತಿಲ್ಲ. ಹೆಚ್ಚೆಂದರೆ, ಅವರಿಗೆ ಕುರುಡು ಅಭಿಮಾನಿ ಬಳಗಗಳಿವೆ. ತಮ್ಮ ವಿದ್ಯಾರ್ಥಿಗಳಲ್ಲಿ ಯೋಚಿಸುವ ಶಕ್ತಿಯನ್ನು ಬೆಳೆಸುವಲ್ಲಿ ಈ ಪೀಳಿಗೆ ಬಹುತೇಕ ವಿಫಲರಾಗುತ್ತಿದ್ದಾರೆ; ಅದರ ಫಲಿತಾಂಶಗಳೂ ನಮ್ಮ ಸಾರ್ವಜನಿಕ ಬದುಕಿನ ಚಹರೆಗಳಲ್ಲಿ ಎದ್ದು ಕಾಣಿಸತೊಡಗಿವೆ.
ಈ ಹೊಸ ಪೀಳಿಗೆಯ ಭಾಷಾ ಉಪನ್ಯಾಸಕರು ತಾವೆಲ್ಲಿ ಹಾದಿ ತಪ್ಪಿದ್ದೇವೆ ಎಂಬ ನಿಟ್ಟಿನಲ್ಲಿ ಯೋಚಿಸಲು, ಬಿಳಿಮಲೆಯವರ ಈ ಆತ್ಮಚರಿತ್ರೆ ಪ್ರೇರಕವಾಗಲಿ ಎಂಬ ಒಂದು ಕ್ಷೀಣ ಆಸೆ…
- ರಾಜಾರಾಂ ತಲ್ಲೂರು
19 ಆಗಸ್ಟ್ 2020
* * *
ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ 'ಕಾಗೆ ಮುಟ್ಟಿದ ನೀರು' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/kaage-muttida-neeru
ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742